ನನಗೆ ಈ ಚರಿತ್ರೆ ಬಗ್ಗೆ ಮೊದಲಿಂದಲೂ ಒಂದು ಬಗೆಯ ಬೇರೆಯದೇ ಅನಿಸಿಕೆ ಇದೆ. ಅದು ಹಲವರಿಗೆ ಒಗ್ಗದೇ ಹೋದರೆ ಅದಕ್ಕೆ ಈಗಲೇ ಮನ್ನಿಪು-ಕೇಳಿಕೊಂಡು-ಬಿಡುತ್ತೇನೆ. ಯಾವಾಗಲೂ ಚರಿತ್ರೆ, ಅದರಲ್ಲೂ ನಮ್ಮ ಇಂಡಿಯದ ಚರಿತ್ರೆ, ಬರೀ ಅರಸತನದ, ಅರಸರ, ಅವರ ಮೋಜಿನ ಬದುಕಿನ ಸುತ್ತಲೇ ಇರುತ್ತೆ ಹಾಗೂ ಅದನ್ನೇ ಮರೆಸುತ್ತದೆ. ಅದು ಎಂದೂ ಆ ಹೊತ್ತಿನ ಸಾಮಾನ್ಯ ಮಂದಿಯ ಬದುಕು, ಅವರ ಕೋಟಲೆಗಳನ್ನು, ಅವರಲ್ಲಿದ್ದ ದಂಗೆ, ಹೋರಾಟದ, ದಬ್ಬಾಳಿಕೆ ನೋವನ್ನು ಕಡೆಯೆಣಿಸಿ ಬಿಡುತ್ತೆ. ಎಷ್ಟು ರಾಜರು ದಿಟದಲ್ಲಿ ಬರಗಾಲದಲ್ಲಿದ್ದ ಪ್ರಜೆಗಳಿಂದ ತೆರಿಗೆ ಕೇಳಿಲ್ಲ. ಬರದ ನಾಡಿನಲ್ಲಿ ಅರಮನೆಗಳನ್ನು ಕಟ್ಟಿಸಿಕೊಂಡಿಲ್ಲ!
ನಾವು ನಮ್ಮ ಹಿಂದಿನರಸರು ಕಟ್ಟಿದ ಕೋಟೆಗಳು, ಅರಮನೆಗಳು, ಆನೆಲಾಯಗಳು, ಕುದುರೆಲಾಯಗಳು, ಆ ಅರಸತನದ ಆನೆ, ಕುದುರೆಗಳಿಗೆ ಮೇಯಿಸ ಮೇವಿನ ಬಗ್ಗೆ ಹೆಮ್ಮೆ ಪಟ್ಟಿಕೊಂಡು ಬೀಗುತ್ತೇವೆ. ಅದೇ ಆ ಅರಸನು ನಾಡಿನಲ್ಲಿ ಮಂದಿಯಲ್ಲಿ ಎಷ್ಟು ಪ್ರಬುದ್ಧಚಿಂತನೆಗಳನ್ನು ಬೆಳೆಸಿದನು, ಅವರಿಗೆಷ್ಟು ವೈಯಕ್ತಿಕ ಸ್ವಾತಂತ್ರ್ಯ, ಅಭಿವಕ್ತಿ ಸ್ವಾತಂತ್ರ್ಯ, ವಿಚಾರ ಸ್ವಾತಂತ್ರ್ಯ, ಒಡೆತನದ ಸ್ವಾತಂತ್ರ್ಯಗಳನ್ನು ಕೊಟ್ಟಿದ್ದ ಎಂಬುದರ ಬಗ್ಗೆ ವಿಚಾರಿಸುವುದೇ ಇಲ್ಲ. ಸಾಮಾನ್ಯವಾಗಿ ನಮ್ಮ ಚರಿತ್ರೆಯ ತುಂಬಾ ಪ್ರಜೆಗಳೆಲ್ಲ ಅರಸ ದೇವರ ಸಮಾನ ಹಾಗೂ ತಾವೆಲ್ಲ ಅವನ ಊಳಿಗಕ್ಕಾಗಿರುವ ದಾಸರೆಂದೇ ಚಿತ್ರತವಾಗಿದೆ. ಇನ್ನೂ ವಿಜಯನಗರದ ಅವಸಾನದ ಹೊತ್ತಿಗೆ ಆ ಅರಸರು ಕನ್ನಡವನ್ನು ಎಷ್ಟು ಕಡೆಗಣಿಸಿ ಮೂಲೆಗಂಪಾಗಿಸಿದ್ದರು ಹಾಗೂ ತಾಳಿಕೋಟೆಯ ಬವರವು ಕನ್ನಡರು ಮತ್ತು ತೆಲುಗರ ನಡುವೆಯ ಕಿತ್ತಾಟವೆಂಬು ಬಣ್ಣಿಸುವ ಹೊತ್ತಗೆಯೂ ಇದೆ. ಹಾಗೇ ಮಯ್ಸೂರ ಅರಸು ಕೂಡ ಹೇಗೆ ಕನ್ನಡವನ್ನು ಕಡೆಗಣಿಸಿ, ತೆಲುಗು, ತಮಿಳು ಹಾಗೂ ಸಂಸ್ಕೃತಕ್ಕೆ ಒತ್ತಿತ್ತರು ಎಂಬುದನ್ನೂ ಅಲ್ಲಿ ಬಣ್ಣಿಸಿದ್ದಾರೆ.
ಅಂತಹ ಹೊತ್ತಗೆಯೊಂದು “ಕನ್ನಡ ಅರಸರ ಅಕನ್ನಡ ಪ್ರಜ್ಞೆ . ಲೇ|ಎಂ.ಎಂ.ಕಲಬುರ್ಗಿ”. ಅದನ್ನೂ ಕೂಡ ನಾವೆಲ್ಲ ಓದಬೇಕೆಂದು ನನ್ನ ಅನಿಸಿಕೆ.
ಗಮನಿಸಿರಿ: ಕೃಷ್ಣದೇವರಾಯನ ಅಷ್ಟದಿಗ್ಗಜರಲ್ಲಿ ಅಷ್ಟೂ ಕವಿಗಳು ತೆಲುಗರು ಹಾಗೂ ಆ ಕಾಲದಲ್ಲಿ ಕನ್ನಡ ಸಾಹಿತ್ಯ ಅವನ ಹಿಂದನರಸರಾದ ಪ್ರೌಢದೇವರಾಯ ಮುಂತಾದವರ ಕಾಲಕ್ಕೆ ಹೋಲಿಸಿದರೆ ಬಲು ಕಡಮೆ. ಹಾಗೂ ಕೃಷ್ಣದೇವರಾಯನು ರಚಿಸಿದ ಕೃತಿಗಳು ಸಂಸ್ಕೃತ ಮತ್ತು ತೆಲುಗಿನಲ್ಲಿವೆ. ಇನ್ನು ಸಾಮಾನ್ಯ ಮಂದಿಗೆ ಹೆಚ್ಚುಕಾಲ ಇರತಕ್ಕ, ಹಾಗು ಅವರ ಬದುಕುಗಳನ್ನು ಬದಲಿಸತಕ್ಕ ವೈಚಾರಿಕತೆಗಳನ್ನು ನನ್ನ ಜ್ಞಾನಪರಿಮಿತಿಯಲ್ಲಿ ಯಾವ ಅರಸನೂ ಮಾಡಿಲ್ಲ. ಅವರ ಪ್ರೋತ್ಸಾಹವೇನಿದ್ದರೂ ಆಸ್ಥಾನ ಪಾಂಡಿತ್ಯಕ್ಕೆ ಹಾಗೂ ಸಂಸ್ಕೃತಭರಿತ ಕಾವ್ಯಕೃಷಿಗೇ ಇತ್ತು.
ಈ ಅರಸರನ್ನು ಬಿಟ್ಟರೆ, ಸಾಮಾನ್ಯ ಮಂದಿಗೆ ಹೆಚ್ಚುಕಾಲ ಇರತಕ್ಕ, ಹಾಗು ಅವರ ಬದುಕುಗಳನ್ನು ಬದಲಿಸತಕ್ಕ ವೈಚಾರಿಕತೆಗಳನ್ನು (ನನ್ನ ಜ್ಞಾನಪರಿಮಿತಿಯಲ್ಲಿ) ನೀಡಿದ ಮಂದಿ ಬಸವಣ್ಣ, ಸರ್ವಜ್ಞ, ಅಲ್ಲಮ ಮುಂತಾದ ಶರಣರು ಹಾಗೂ ಹೊಸಗನ್ನಡದ ಶಿವರಾಮಕಾರಂತ, ಪೂಜಂತೇ ಮುಂತಾದವರು. ಅವರ ಬಗ್ಗೆ ನನಗೆ ವಿಜಯನಗರಕ್ಕಿಂತ ಹೆಚ್ಚಿನ ಹೆಮ್ಮೆಯ ಅನುಭವದ ಮನಸ್ಸಿದೆ.
ನನ್ನಿ
ಸ್ವಾತಂತ್ರ್ಯ ಎಂಬುದು ಯಾರೋ ಕೊಡುವಂತಹದ್ದು, ಇಲ್ವೇ ಯಾರಿಂದಲೋ ಬೇಡಿ ಇಸಿದುಕೊಳ್ಳುವಂತಹದ್ದಲ್ಲ. ಅದೊಂದು ನಮ್ಮೊಳಗೇ ಇರೋ ನಮ್ಮತನ. ಅದನ್ನ ನಾವು ಬಳಸಿಕೊಳ್ಳೋ ಅವಕಾಶಗಳನ್ನು ಕಾಯ್ದುಕೊಂಡು ಹೋಗಬೇಕಶ್ಟೆ!
ಇತ್ತೀಚೆಗೆ ವರ್ಣ ಪದ್ದತಿಯ ತಾರತಮ್ಯಕ್ಕೆ ಹಾಗೂ ’ಸಾಂಸ್ಕೃತಿಕ’ ದಬ್ಬಾಳಿಕೆಗೆ ಹಾಗೂ ’ಶ್ರೇಷ್ಠ’ಜನರ ‘ಬೌದ್ಧಿಕ’ ಹಿಡಿತಕ್ಕೆ ಇಂಬಾಗಿ ವಿಜ್ಞಾನದ ಬಳಕೆ ಹೆಚ್ಚಾಗುತ್ತಿದೆ. ಬಹುಶಃ ಅದು ನಮ್ಮ ಇಂಡಿಯದಲ್ಲಿ ಹೆಚ್ಚು ಏಕೆಂದರೆ ನಮ್ಮ ಕಲಿಕೆ, ವಿದ್ಯಾಭ್ಯಾಸ ಹಾಗೂ ಪಾಂಡಿತ್ಯ ಒಂದು ವರ್ಗದ ಸ್ವತ್ತಾಗಿ ಇಂದಿಗೂ ಇದೆ. ಇದನ್ನೊಪ್ಪದವರೊಮ್ಮೆ ’ಸಾಹಿತ್ಯಕ’, ನ್ಯೂಸ್ ಪೇಪರ್, ಧಾರ್ಮಿಕ ಹಾಗೂ ಮುಂತಾದ ಬೌದ್ಧಿಕ ( ಬುದ್ಧಿಗೆ ಸಂಬಂಧಿಸಿದ ) ವಲಯದಲ್ಲಿರುವ ಮಂದಿಯ ವರ್ಗದ ಲೆಕ್ಕವನ್ನೊಮ್ಮೆ ಗಮನಿಸಿಕೊಳ್ಳಬೇಕು.
ಈ ಬರಹದಲ್ ನಾನೇನ್ ಹೇಳಕ್ ಹೊರಟಿದ್ದೀನಂತ ನಂಗೆ ಪೂರ್ತಿ ಕ್ಲಿಯರ್ ಆಗ್ ಹೇಳಕ್ ಆಗದೇ ಹೋಗ್ ಬೋದು. ಹಂಗೇ ಈ ಬರಹಕ್ ಕರೆಕ್ಟಾದ ಟಯ್ಟಲ್ ಇಟ್ಟಿದ್ದೀನಿ ಅಂತನೂ ನನಗೆ ನೆಚ್ಚಿಲ್ಲ. ಒಟ್ರಾಸೆ ಈ ಬರಹ ಬರೀ ನಾನ್ ಹೇಳಬೇಕು ಅಂತ ಅಂದುಕೊಂಡ್ ಇರೋದನ್ ಹೇಳತ್ತೆ. ಅಶ್ಟೇ.